6.17.2008

ಚಾಪೆ, ರಂಗೋಲಿ ಕೆಳಗೆ ತೂರುವವರ ನಡುವೆ ಕಾಪಿರೈಟೂ, ಕಾನೂನೂ...

ಬರಹಗಾರರು-ವಿಶಾಲಮತಿ, `ಪುಸ್ತಕ ಪ್ರೀತಿ' ಬ್ಲಾಗ್

ಅಂತರ್ಜಾಲದ ಓದುಗರಿಗೆ ಕನ್ನಡ ಪುಸ್ತಕಗಳ ಬಗೆಗಿನ ಪ್ರೀತಿಯನ್ನು ಬೆಳೆಸಬೇಕೆಂಬ ಉದ್ದೇಶದಿಂದ ಬ್ಲಾಗ್ ಪ್ರಪಂಚದಲ್ಲಿ ಕಾಲಿಟ್ಟ ನನಗೆ, ಈ ಸಾಹಸ (ಹೊಸದಾಗಿ ಮಾಡುವುದೆಲ್ಲವೂ ಸಾಹಸವೇ ಅಲ್ಲವೇ?) ಪ್ರಾರಂಭಿಸಿದ ಹೊಸ ಹೊಸದರಲ್ಲೇ, ಕನ್ನಡಸಾಹಿತ್ಯ.ಕಾಂ ನೇತೃತ್ವದಲ್ಲಿ ನಡೆದ ‘ಅಂತರ್ಜಾಲ ಬಗೆಗಿನ ಈ ಕಾರ್ಯಕ್ರಮ ತುಂಬಾ ಖುಷಿ ಕೊಟ್ಟಿತು.
‘ಅಂತರ್ಜಾಲ ಎಂದೊಡನೆ ಇಂಗ್ಲೀಷ್ ಎಂದುಕೊಳ್ಳದಂತೆ ಅಪ್ಪಟ ಕನ್ನಡದಲ್ಲೇ ನಡೆದ ಕಾರ್ಯಕ್ರಮವಾಗಿ ಇನ್ನಷ್ಟು ಖುಷಿ ಕೊಟ್ಟಿತು.
ಕನ್ನಡ ಸಾಹಿತ್ಯ.ಕಾಂ ತನ್ನ ೮ ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು ಸಂದರ್ಭಕ್ಕನುಗುಣವಾಗಿ ಅಂತರ್ಜಾಲ (ಬ್ಲಾಗ್) ನಲ್ಲಿ ಕನ್ನಡದ ಬಳಕೆಯ ಆವಶ್ಯಕತೆ ಹಾಗೂ ಈ ನಿಟ್ಟಿನಲ್ಲಿ ಅದು ಎದುರಿಸುತ್ತಿರುವ ಸವಾಲುಗಳನ್ನು ವಿಶ್ಲೇಷಿಸಲೆಂದೇ ನಡೆಸಿದ ಕಾರ್ಯಕ್ರಮ ಇದು.

ಇದರಲ್ಲಿ ಅಂತರ್ಜಾಲದೊಡನೆ ಪ್ರಾದೇಶಿಕ ಭಾಷೆಗಳು ಅದರಲ್ಲೂ ಕನ್ನಡ ಸಂಸ್ಕೃತಿ, ಪುಸ್ತಕೋದ್ಯಮ, ಸಂಗೀತ, ಸಿನೆಮಾ ಹಂಚಿಕೆಗಳು ತಳುಕು ಹಾಕಿಕೊಂಡಿವೆ. ಅಂತರ್ಜಾಲದಿಂದಾಗಿ ಈ ಎಲ್ಲಾ ಅಂದರೆ ಕನ್ನಡ ಸಂಸ್ಕೃತಿಗೆ, ಪುಸ್ತಕೋದ್ಯಮಕ್ಕೆ, ಸಂಗೀತಕ್ಷೇತ್ರ ಹಾಗೂ ಸಿನೆಮಾಕ್ಷೇತ್ರಕ್ಕೆ ಧಕ್ಕೆಯಾಗಬಹುದು. ಕಾಪಿರೈಟ್‌ನ ಸರಿಯಾದ ಜಾರಿಯಿಲ್ಲದೇ ಅಂತರ್ಜಾಲದಲ್ಲಿ ಪ್ರಕಟಿಸಲ್ಪಟ್ಟ ಪುಸ್ತಕ, ಸಂಗೀತ, ಸಿನೇಮಾ ಮುಂತಾದವುಗಳಿಂದಾಗಿ ಆಯಾ ಉದ್ಯಮಗಳಲ್ಲಿ ಈಗಾಗಲೇ ದುಡಿಯುತ್ತಿರುವವರ ಉದ್ಯಮಕ್ಕೆ ಧಕ್ಕೆ ಒದಗಬಲ್ಲದು ಎಂಬ ಆತಂಕ ಒಂದು ಅಭಿಪ್ರಾಯವಾದರೆ ಈ ಅಂತರ್ಜಾಲವನ್ನು ಈ ಉದ್ದಿಮೆಗಾಗಿಯೇ ಉಪಯೋಗಿಸಿಕೊಳ್ಳಬಹುದಾದ ಸಾಧ್ಯತೆಯ ಆಶಯ ಇನ್ನೊಂದು ಅಭಿಪ್ರಾಯವಾಗಿ ಇಲ್ಲಿ ಹೊರಹೊಮ್ಮಿತು.

ಕನ್ನಡ ಸಾಹಿತ್ಯ.ಕಾಂ ಬಳಗದವರು ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ ವಿವಿದ ಕ್ಷೇತ್ರಗಳ ಮಹಾನುಭಾವರು ಪ್ರಬಂಧ ಮಂಡಿಸಿದರು.

ಪ್ರಾರಂಭದಲ್ಲಿ ಅಂತರ್ಜಾಲದ ಸಂದರ್ಭದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಸೃಜನಶೀಲತೆಯ ಗತಿ ಸ್ಥಿತಿ, ಸವಾಲುಗಳು ಪ್ರಬಂಧ ಮಂಡಿಸಿದ ಪ್ರಕಾಶ್ ಬೆಳವಾಡಿಯವರು.

ಅಂತರ್ಜಾಲ ಒಂದು ಅದ್ಬುತವಾದ ಮಾದ್ಯಮ. ಇದು ರುಚಿ ಮತ್ತು ಸ್ಪರ್ಶ ಎರಡನ್ನು ಬಿಟ್ಟು ಇನ್ನೆಲ್ಲಾ ರೀತಿಯ (ದೃಶ್ಯ, ಶೃವ್ಯ ಇತ್ಯಾದಿ) ಆನಂದ ನಮ್ಮದಾಗಿಸುತ್ತದೆ. ಇದೊಂದು ಅದ್ಭುತ ಮಾದ್ಯಮ ಯಾಕೆಂದರೆ ಇದಕ್ಕೆ ಅಕ್ಷರಸ್ತರು ಅನಕ್ಷರಸ್ತರು ಎಂಬ ಬೇದವಿಲ್ಲ. ಇನ್ನು ಮುಂದೆ ಅನಕ್ಷರಸ್ತರೂ ತಮಗೆ ಬೇಕಾದ ವಿಷಯದಲ್ಲಿ ಜ್ಞಾನವನ್ನು ಇತರರ ಸಹಾಯವಿಲ್ಲದೆ ಪಡೆಯಬಲ್ಲರು. ಹೀಗೆ ಅಂತರ್ಜಾಲದಿಂದ ಸಮಾಜಕ್ಕೆ ಆಗುವ ಉಪಯೋಗಗಳನ್ನು ತಿಳಿಸುತ್ತಾ, ಅಂತರ್ಜಾಲದ `content free' ವ್ಯವಸ್ಥೆಯು ‘ `content producer' ಗಳಿಗೆ ಜಾಹೀರಾತುಗಳಿಂದ ಸಂಭಾವನೆ ಪಡೆಯುವಂತೆ ಆಗಬಹುದು. ಇದರಿಂದ ‘person to person' ಬದಲಾಗಿ `person to community' ವ್ಯವಸ್ಥೆ ನಿರ್ಮಾಣವಾಗುತ್ತದೆ ಎಂದರು.

ಪ್ರಾದೇಶಿಕ ಭಾಷೆಯಾದ ಕನ್ನಡದ ಲಿಪಿಯು ಕಂಪ್ಯೂಟರ್‌ನಲ್ಲಿ ಅಳವಡಿಸಲು ಕಷ್ಟಸಾಧ್ಯವಾದದ್ದರಿಂದ ಕನ್ನಡ ಲಿಪಿಯನ್ನು ನವೀಕರಿಸಬೇಕು. ಕನ್ನಡ ಲಿಪಿಯು linear ಆಗಿದ್ದಲ್ಲಿ ಇದು ಸುಲಭವಾಗಿರುತ್ತಿತ್ತು. ಯಾವುದೇ ಭಾಷೆಯು ನವೀಕರಣಕ್ಕೊಳಗಾಗಲಾರದ ಮಡಿವಂತಿಕೆ ಮೆರೆದರೆ ಅದು ಉಳಿಯುವುದಾಗಲೀ ಬೆಳೆಯುವುದಾಗಲೀ ಸಾಧ್ಯವಿಲ್ಲ. ಲಿಪಿಯನ್ನು ನವೀಕರಿಸಿದಲ್ಲಿ ಅದು ಕನ್ನಡ ಸಂಸ್ಕೃತಿಗೆ ಧಕ್ಕೆ ಎಂದು ತಿಳಿಯಬೇಕಾಗಿಲ್ಲ. ಒಂದು ಭಾಷಾ ಸಂಸ್ಕೃತಿಯು ಬರಿದೇ ಅದರ ಲಿಪಿಯಲ್ಲಿಲ್ಲ. ಕನ್ನಡ ಲಿಪಿಗೆ ಹೊರತಾದ ಲಿಪಿಯಿಂದ ದಾಖಲಿಸಲಾಗದ ಎಷ್ಟೋ ಭಾವಗಳು ಕನ್ನಡ ಸಂಸ್ಕೃತಿಗೆ ಹೊರತು ಎಂದು ತಿಳಿಯಬೇಕಾಗಿಲ್ಲ.

ಮುಂದಿನ ಪ್ರಬಂಧ ವಿಷಯ ಅಂತರ್ಜಾಲ - ಪುಸ್ತಕೋದ್ಯಮ. ಪ್ರಬಂಧಕಾರ ಪ್ರಕಾಶ್ ಕಂಬತ್ತಳ್ಳಿ ಯವರು ಅಂತರ್ಜಾಲದಲ್ಲಿ ಪುಸ್ತಕದ ವಿತರಣೆ ಕುರಿತು ಆತಂಕ ವ್ಯಕ್ತಪಡಿಸಿದರು. ಇದರಿಂದ ಪುಸ್ತಕೋದ್ಯಮಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದರು. ಅವರು ಕನ್ನಡ ಸಂಸ್ಕೃತಿ ಬೆಳೆಯಬೇಕೆಂದರೆ ಶಾಲೆಗಳಲ್ಲಿ ೧ ರಿಂದ ೧೦ ನೇ ತರಗತಿಯವರೆಗೂ ಕನ್ನಡ ಒಂದು ವಿಷಯವಾಗಿ ಕಡ್ಡಾಯವಾಗಬೇಕು ಎಂದರು.

ಮುಂದಿನ ಪ್ರಬಂಧ ವಿಷಯ ಅಂತರ್ಜಾಲ - ಸಂಗೀತ ಹಂಚಿಕೆ. ಪ್ರಬಂಧಕಾರ ಲಹರಿ ವೇಲು ಎಂದೇ ಪ್ರಖಾತರಾದ ತುಳಸಿರಾಮ್ ನಾಯ್ಡು ರವರು ಸಹ ಸಂಗೀತ ಲೋಕದ ‘ ಛಿoಟಿಣeಟಿಣ ಠಿಡಿoಜuಛಿeಡಿ ಗಳಿಗೆ ತಮ್ಮ ಕೆಲಸದಲ್ಲಿ ಆಸಕ್ತಿಕಳೆದುಕೊಳ್ಳಬಹುದಾದಂತಹ ಪರಿಸ್ಥಿತಿ ಉದ್ಭವವಾಗಬಹುದು ಎಂಬ ಆತಂಕ ತೋರಿದರು.

ಕೊನೆಯ ಪ್ರಬಂಧದ ವಿಷಯ ಅಂತರ್ಜಾಲ-ಸಿನೆಮಾ. ಪ್ರಬಂಧಕಾರ ಖ್ಯಾತ ನಿರ್ದೇಶಕ ಗುರುಪ್ರಸಾದ್ ಕೆ.ಆರ್. ಅವರು ‘content'ನಲ್ಲಿ ಬಲವಿದ್ದರೆ ಅಂತರ್ಜಾಲದಿಂದ ಸಿನೆಮಾ ಪ್ರಪಂಚಕ್ಕೆ ಯಾವ ತೊಂದರೆಯೂ ಬರಲಾರದು ಎಂಬ
ಭರವಸೆಯ ಮಾತನಾಡಿದರು.

ಎಲ್ಲಾ ಪ್ರಬಂಧಗಳ ಮಂಡನೆ ನಂತರ ಪ್ರಶ್ನೋತ್ತರಗಳಿಗೆ ಅವಕಾಶವಿದ್ದು ಕೇಳುಗರು ಅದನ್ನು ಚೆನ್ನಾಗೇ ಉಪಯೋಗಿಸಿಕೊಂಡದ್ದು ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು. ಯಾವುದೇ ಕಾರಣಕ್ಕೆ ಅಂತರ್ಜಾಲ ಒಂದು ಇಲ್ಲಿನ ಎಲ್ಲಾ ಉದ್ಯಮಗಳನ್ನು ನುಂಗಿ ನೀರು ಕುಡಿಯುವ ರಾಕ್ಷಸನಲ್ಲ. ಅಂತರ್ಜಾಲವನ್ನು ಸರಿಯಾದ ನಿಟ್ಟಿನಲ್ಲಿ ಉಪಯೋಗಿಸಿಕೊಂಡಲ್ಲಿ ಅದು ಇಲ್ಲಿನ ಎಲ್ಲಾ ಉದ್ಯಮಗಳಿಗೆ ಪೂರಕವಾಗಿ ನಿಲ್ಲಬಲ್ಲದು ಎಂದು ಕೇಳುಗರ ಒಟ್ಟಭಿಪ್ರಾಯವಾಗಿತ್ತು.

ಕೊನೆಯಲ್ಲಿ ಮಾತನಾಡಿದ ಅಧಮ್ಯ ಸಂಸ್ಥೆಯ ಟಿ.ಜೆ.ಯತೀಂದ್ರನಾಥ್ ಅವರು ಕನ್ನಡ ನುಡಿ ಸಂಸ್ಕೃತಿಯನ್ನು
ಉಳಿಸಿಕೊಳ್ಳುವುದು ನಮ್ಮಿಂದ ಮಾತ್ರಾ ಸಾಧ್ಯ. ಕನ್ನಡ ಉಳಿಸಿ ಬೆಳೆಸಿಕೊಂಡು ಹೋಗುವುದಕ್ಕೆ ನಮಗೆ ಆಗುತ್ತಿಲ್ಲ ಎಂದು ಹೇಳಲು ನೂರು ಕಾರಣಗಳು ದೊರೆಯಬಹುದು ಆದರೆ ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದೇ. ಕನ್ನಡವನ್ನು ಎಲ್ಲಾ ಕಡೆಯಲ್ಲಿ ಬಳಸಿಯೇ ಕನ್ನಡವನ್ನು ಉಳಿಸಲು ಸಾಧ್ಯ. ನಾವು ಕನ್ನಡದವರೆಂದು ಕೊರಗುವ ಕಾರಣವಿಲ್ಲ ಕನ್ನಡದ ಬಗ್ಗೆ ಕಾಳಜಿ ತೋರಿಸಿ ಎಂದು ಕರೆ ಕೊಟ್ಟರು.

ಈ ನಡುವೆ ಬ್ರೌಸರ್‌ನಲ್ಲೇ ಕನ್ನಡ ಆನ್ಸಿ ಹಾಗೂ ಯೂನಿಕೋಡ್ ಎರಡನ್ನೂ ಕೀ ಇನ್ ಮಾಡಲು ಸಾಧ್ಯವಾಗುವ ಸ್ಕ್ರಿಪ್ಟ್ ಹಾಗೂ ಕನ್ನಡ ಸ್ಪೆಲ್ ಚೆಕರ್ (ಯೂನಿಕೋಡ್ ಮತ್ತು ಯೂನಿಕೋಡೇತರ) ಪ್ಲಗ್ ಇನ್ ಪ್ರಾತ್ಯಕ್ಷಿಕೆ ಇತ್ತು. ಇದನ್ನು ನಡೆಸಿಕೊಟ್ಟವರು ರಾಘವ ಕೊಟೆಕಾರ್ ಮತ್ತು ರುದ್ರಮೂರ್ತಿಯವರು.

6.01.2008

ಮತ್ತೂ ಒಂದು ವಿಚಾರಸಂಕಿರಣ...!

ಕೆಲವೊಮ್ಮೆ ಹಾಗಾಗುತ್ತೆ. ಎದುರಾಗುವ ಪ್ರತಿ ಸನ್ನಿವೇಷವೂ ನಮಗೆ ವಿರುದ್ಧವಾಗಿ ವರ್ತಿಸುತ್ತಿರುತ್ತದೆ.
ಕನ್ನಡ ಅಂತರ್ಜಾಲ ಜಗತ್ತಿನಲ್ಲಿ ಕನ್ನಡದ ಪ್ರಾತಿನಿಧ್ಯತೆಯನ್ನು ಐದಾರು ವರ್ಷಗಳ ಕಾಲ ಸಮರ್ಥವಾಗಿ ಎತ್ತಿ ಹಿಡಿದ ಕನ್ನಡಸಾಹಿತ್ಯ.ಕಾಂ ಅನ್ನುವ ಕನ್ನಡದ ಶ್ರೇಷ್ಠ ಕೃತಿಗಳ ಆಕರ ತಾಣಕ್ಕೂ ಸನ್ನಿವೇಷಗಳು ವಿರುದ್ಧವಾಗಿದ್ದವು. ಅಗಾಧ ಸಂಖ್ಯೆಯ ಬೆಂಬಲಿಗರೂ, ಓದುಗರೂ ಇದ್ದರೂ ತಾಣ ಸುಮಾರು ಒಂದೂವರೆ ವರ್ಷಗಳ ಕಾಲ ನಿಂತೇ ಹೋಗಿತ್ತು. ಏನೆಂದು ಹೇಳೋದು? ಡಿಜಿಟಲ್ ಜಗತ್ತಿನಲ್ಲಿ ಎಲ್ಲವೂ ಕ್ಷಣಿಕವೆಂಬುದನ್ನು ನಿಜ ಮಾಡಲೋ ಎಂಬಂತೆ ನಮ್ಮ ಸರ್ವರ್‌ಗಳೂ, ಹಾರ್ಡ್‌ಡಿಸ್ಕ್‌ಗಳೂ ಏಕಕಾಲಕ್ಕೆ ಕೈಕೊಟ್ಟು ಅಗಾಧವಾದ ಕಂಟೆಂಟ್ ಒಂದೇ ದಿನದಲ್ಲಿ ಬರಿದಾಯಿತು. ಬ್ಯಾಕ್‌ಅಪ್ ಅನ್ನೋದನ್ನು ಎಷ್ಟು ಕಡೆ ಅಂತ ಇಡೋಕೆ ಸಾಧ್ಯ? ಆದರೂ ಬ್ಯಾಕ್‌ಅಪ್‌ ಕುರಿತಂತೆ ತೋರಿದ ಅಲ್ಪ ಉದಾಸೀನ ಅಷ್ಟೋದು ಡೇಟಾ ಕಳೆದುಕೊಳ್ಳಲು ಕಾರಣವಾಯಿತೇನೋ...? ಈಗ ಎಲ್ಲಾ ಸರಿಯಾದ ಮೇಲೆ ಕಾರಣಗಳನ್ನು ಕೊಡೋದು ಬಾಲಿಶತನವೇನೂ ಅಲ್ಲವೆಂದು ನನ್ನ ಭಾವನೆ.

ಇರಲಿ. ಕಳೆದ ಒಂದೂವರೆ ವರ್ಷ ಕನ್ನಡಸಾಹಿತ್ಯ.ಕಾಂ ತಂಡ ಸುಮ್ಮನೇನೂ ಕುಳಿತಿಲ್ಲ. ಕಳೆದುಹೋದ ಡೇಟಾವನ್ನು ಹೆಚ್ಚೂ ಕಮ್ಮಿ ಹುಡುಕಿ ಮರಳಿ ಪಡೆಯುವ ಜೊತೆಗೆ ಅದನ್ನು ಒಂದು ಯೋಜಿತ ರೀತಿಯಲ್ಲಿ ತನ್ನದೇ ‘ಸಂಪೂರ್ಣ ಫೀನಿಕ್ಸ್’ ಕೃತಿ ನಿರ್ವಹಣಾ ವ್ಯವಸ್ಥೆಗೆ ಅಳವಡಿಸಿದೆ. ಈ ಮಧ್ಯೆ ತಾಣ ನಿಂತು ಹೋದದ್ದರಿಂದ ಬೆಂಬಲಿಗರ ಬಳಗದ ಚಟುವಟಿಕೆಗಳೂ ನಿಂತುಹೋದವು. ಮುಂಚೂಣಿಯಲ್ಲಿದ್ದವರನೇಕರು ಉದ್ಯೋಗ ನಿಮಿತ್ತ ದೂರದ ಊರುಗಳಿಗೆ ಹೋದರು. ಆದಾಗ್ಯೂ ಹೇಗಾದರೂ ಮಾಡಿ ಕನ್ನಡಸಾಹಿತ್ಯ.ಕಾಂ ಕನ್ನಡ ಅಂತರ್ಜಾಲ ಜಗತ್ತಿಗೆ ಮರಳಿ ಬರಬೇಕೆನ್ನುವ ನಮ್ಮ ಅಭಿಲಾಶೆ ಗಟ್ಟಿಯಾಗಿತ್ತು. ಈವತ್ತು ಅದು ಸಾಧ್ಯವೂ ಆಗುತ್ತಿದೆ. ಸಂಪಾದಕರಾದ ಶೇಖರಪೂರ್ಣ, ಬಳಗದ ತಾಂತ್ರಿಕ ತಂಡದ ರಾಘವ ಕೋಟೆಕಾರ್ ಕನ್ನಡಸಾಹಿತ್ಯ.ಕಾಂನ ಮರುಹುಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರಿಗೆ ಬಳಗದ ಕೃತಜ್ಞತೆಗಳನ್ನು ಅರ್ಪಿಸುತ್ತಾ...

ಮೊನ್ನೆ ಮೇ ೧ರ ಗುರುವಾರ ನಡೆದ ಕೆ ಎಸ್ ಸಿ ಬೆಂಬಲಿಗರ ಸಭೆ ಸಮಾರಂಭ ಕುರಿತಂತೆ ಸುಧೀರ್ಘವಾಗಿ ಚರ್ಚಿಸಿತು. ಕಾರ್ಯಕ್ರಮದ ಸ್ಥಳ, ದಿನಾಂಕವನ್ನು ನಿರ್ಧರಿಸಿತು. ಸಮಾರಂಭದ ಆಯೋಜನೆಗೆ ಮುಂಚೂಣಿಯಲ್ಲಿರುವ ಸದಸ್ಯರನ್ನೊಳಗೊಂಡ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಗಳಿಗೆ ದಿನಾಂಕ ೧೧-೦೫-೨೦೦೮ ಮತ್ತು ೩೧-೦೫-೨೦೦೬ರಂದು ನಡೆದ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ವಿಸ್ಮೃತ ರೂಪ ನೀಡಲಾಯಿತು.

ಕನ್ನಡಸಾಹಿತ್ಯ.ಕಾಂ ಮುಂದಿನ ಜೂನ್ ೮ನೇ ತಾರೀಖು ಭಾನುವಾರ ಮತ್ತೆ ತನ್ನ ಎಂದಿನ ವೈಭವದೊಂದಿಗೆ ಅಂತರ್ಜಾಲ ಲೋಕಕ್ಕೆ ಸೇರ್ಪಡೆಗೊಳ್ಳಲಿದೆ. ಅದೂ ಒಂದು ಅರ್ಥಪೂರ್ಣವೆನಿಸುವ ಕಾರ್ಯಕ್ರಮದ ಮೂಲಕ. ಮರುಹುಟ್ಟನ್ನು ೮ನೇ ವಾರ್ಷಿಕೋತ್ಸವವೆಂದು ಹೆಸರಿಟ್ಟು ಕನ್ನಡದ ಯುವ ಮನಸ್ಸುಗಳ ಮಧ್ಯೆ ಆಚರಿಸಿ ಸಂಭ್ರಮಿಸುವ ಹಂಬಲ ನಮ್ಮದು. ಕಾರ್ಯಕ್ರಮ ’ಕ್ರೈಸ್ಟ್ ಕಾಲೇಜ್ ಆಫ್ ಲಾ’ದ ಸಭಾಂಗಣ, ಹೊಸೂರು ರಸ್ತೆ, ಬೆಂಗಳೂರು ಇಲ್ಲಿ ನಡೆಯುವುದೆಂದು ನಿರ್ಧರಿಸಲಾಗಿದೆ. ಕಾರ್ಯಕ್ರಮಕ್ಕೆ ನಿರ್ದೇಶಕರಾದ ಪ್ರಕಾಶ ಬೆಳವಾಡಿ, ಗುರುಪ್ರಾಸ್ ಬಿ ಆರ್, ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ, ಲಹರಿ ಆಡಿಯೋದ ವೇಲು, ಕೆಟುಕೆ ಟೆಕ್ನಾಲಜೀಸ್ ಸಾಫ್ಟ್‌ವೇರ್‌ನ ಸಿ ಇ ಓ ಯತೀಂದ್ರರವರು ಭಾಗವಹಿಸುವುದು ಬಹುತೇಕ ಖಚಿತವಾಗಿದೆ. ಅವತ್ತು ‘ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು’, ಎಂಬ ವಿಷಯದ ಮೇಲೆ ಮಾತುಕಥೆಗಳಾಗಲಿವೆ. ಸಮಯ, ಉತ್ಸಾಹ ಇದ್ದರೆ ಇನ್ನೊಂದು ವಿಶಿಷ್ಟ ಕಾರ್ಯಕ್ರಮ ‘ಬ್ಲಾಗೀ ಮಾತುಕತೆ’ ಹಮ್ಮಿಕೊಳ್ಳುವ ಯೋಜನೆಯೂ ಇದೆ.

ಕಾರ್ಯಕ್ರಮದ ರೂಪುರೇಷೆಗಳು ಇಂತಿವೆ.
ಬೆಳಗಿನ ೧೦-೩೦ಕ್ಕೆ ಕನ್ನಡಸಾಹಿತ್ಯ.ಕಾಂ ೮ನೇ ವಾರ್ಷಿಕೋತ್ಸವ ಉದ್ಘಾಟನೆ.
ಕನ್ನಡಸಾಹಿತ್ಯ.ಕಾಂ ಮತ್ತು ಅದರ ಚಟುವಟಿಕೆಗಳ ಕಿರುಪರಿಚಯ. ನಂತರ ವಿಷಯದ ಮೇಲೆ ಸಂಪನ್ಮೂಲ ವ್ಯಕ್ತಿಗಳು ಮಾತನಾಡುತ್ತಾರೆ. ಪ್ರತಿಯೊಬ್ಬರ ಮಾತಿನ ನಂತರ ಪ್ರಶ್ನೋತ್ತರದ ಅವಧಿ ಇರುತ್ತದೆ. ಮುಖ್ಯ ಕಾರ್ಯಕ್ರಮ ಮಧ್ಯಾಹ್ನ ಒಂದು ಗಂಟೆಗೆ ಮುಗಿಯುತ್ತದೆ. ೧ರಿಂದ ೧-೩೦ರವರೆಗೆ ಊಟದ ಸಮಯ. ಮಹ್ಯಾಹ್ನ ೨ರ ನಂತರ ಸಂಭಾವ್ಯ ಬ್ಲಾಗೀ ಮಾತುಕತೆ ಇರುತ್ತದೆ. ಅದು ನಾಲ್ಕು ಗಂಟೆಯವರೆಗೆ ಮುಂದುವರೆಯಬಹುದು.

ವಿಚಾರಸಂಕಿರಣದ ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english

http://saadhaara.com/events/index/kannada

ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ನೀವು ಬಂದರೆ ಸಮಕ್ಷಮ ಭೇಟಿ ಆಗೋಣ.

ರವೀ...

ಜನಪ್ರಿಯ ಲೇಖನಗಳು