Showing posts with label kannada bloggers meet. Show all posts
Showing posts with label kannada bloggers meet. Show all posts

3.18.2008

ಕನ್ನಡದ ಕತ್ತಲೆಗೆ ಬ್ಲಾಗೀ ಟಾರ್ಚು :ಒಂದು ಬ್ಲಾಗೀ ಮಿಲನ

ಶ್ರೀಮಾತಾ,

ಕ್ಷಮೆಯಿರಲಿ ನನ್ನ ಗಡಿಬಿಡಿ ಮತ್ತು ಹೊಸ ಹುಡುಗಿಯರನ್ನು ನೇರವಾಗಿ ಮಾತನಾಡಿಸಲಾಗದ ಲಘು ಸಂಕೋಚಕ್ಕೆ.
ಬ್ಲಾಗೀ ಮಿಲನದಲ್ಲಿ ರಾಜೇಶ್ ನಿಮ್ಮನ್ನು ’ಮ್ಯುಸಿಸಿಯನ್’ ಅಂತ ಪರಿಚಯಿಸಿದಾಗ, ನಾನು ಪೆದ್ದು-ಪೆದ್ದಾಗಿ ನೋಡಿದಾಗ-ನೀವು ಏನಂದುಕೊಂಡಿರೋ...ಇರ್ಲಿ ಬಿಡಿ. "ಹೀಗೆ ಸುಮ್ನೆ" ಬ್ಲಾಗ್‌ಕರ್ತೆ ಅಂದಿದ್ದರೆ ತಕ್ಷಣ ಗೊತ್ತಾಗ್ತಿತ್ತು. ಸ್ನೇಹಿತರನ್ನು ವಿಚಾರಿಸಿ, ನಿಮ್ಮ ಕೆಲವು ಹಳೆ ಪೋಸ್ಟುಗಳನ್ನು ನೋಡಿದ ಮೇಲೇನೇ ನನಗೆ ನಿಮ್ಮ ಬಗ್ಗೆ ತಿಳಿದದ್ದು. ಜೊತೆಗೆ ಶ್ರೀಮಾತ ಎನ್ನುವ ಹೆಸರು, ಅಪರೂಪಕ್ಕೊಮ್ಮೆ ಹಲವಾರು ಬ್ಲಾಗ್‌ಗಳನ್ನು ಒಟ್ಟಿಗೆ ನೋಡುವಾಗ ಆಗುವ ಗೊಂದಲ ಇತ್ಯಾದಿಗಳು ನಿಮ್ಮನ್ನು ಗುರುತಿಸುವಲ್ಲಿ ನನಗೆ ಅಡ್ಡಿಯಾದವು. ಈಗ ಗುರುತಾಯಿತು.

ಸುಶ್ರುತನಿಗೆ ಎಲ್ಲಾ ಬ್ಲಾಗಿಗಳನ್ನು(ಮುಖ್ಯವಾಗಿ ಹುಡ್ಗೀರೂ!)ಪರಿಚಯ ಮಾಡಿಕೊಳ್ಳಲು ನೀವು ಆಯೋಜಕರು ಅವಕಾಶವನ್ನೇ ಕೊಡಲಿಲ್ಲವೆಂದು ಛೇಡಿಸಿದೆ. ತೀರ ಕೆಲವರ, ಹಲವೆಡೆ ಓದಿದ-ಕೇಳಿದ ಪುನರಾವರ್ತಿತ ಭಾಷಣಗಳನ್ನು ಸ್ವಲ್ಪ ಸೀಮಿತವಾಗಿಸಿದ್ದರೆ ಇನ್ನು ಕೆಲವರಿಗೆ ಪರಿಚಯಿಸಿಕೊಳ್ಳಲು ಅವಕಾಶವಾಗುತ್ತಿತ್ತು.
ಯಾವ ಕಾರ್ಯಕ್ರಮದಲ್ಲೂ ಕೇಳಿ ಬರುವ ಸವಕಲು ಪದವೇ ‘ಕಾಲಾವಕಾಶವೇ ಆಗಲಿಲ್ಲ’ ಅನ್ನೋದು. Informal ಆಗಬಹುದಿದ್ದ ಕಾರ್ಯಕ್ರಮ ಭಾಷಣಗಳಿಂದ formal ಆಗಿ ಹೋಗುತ್ತೆ. ಇದೆಲ್ಲದರ ಮಧ್ಯೆ ರಷೀದ್, ವಸುಧೇಂದ್ರ ಮುಂತಾದವರ ಜೊತೆ ಸ್ವಲ್ಪ ಮಾತಾಡ್ಲಿಕ್ಕೆ ಆಗಿದ್ದು ಒಳ್ಳೆ ಸಂಗತಿ.

ಯಾವುದೊಂದು ಕಾರ್ಯಕ್ರಮದ ಬಗೆಗೆ ಕೊಂಕು ತೆಗೆಯುವುದು ಬಹಳ ಸಲೀಸು. ಆದ್ರೆ ಸಣ್ಣದೊಂದು ಕಾರ್ಯಕ್ರಮವನ್ನು ಆಯೋಜಿಸಿ ಮುಗಿಸಲಿಕ್ಕೆ ಎಷ್ಟೊಂದು ಅಡೆತಡೆಗಳು-ಆತಂಕಗಳು ಎದುರಾಗುತ್ತವೆಂಬುದು ಬಹಳಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿದ ನನ್ನ ಅನುಭವದಲ್ಲಿದೆ.

ಆದ್ರೆ, ಸುಶ್ರುತ ಕಾರ್ಯಕ್ರಮದ ಮೊದಲಿಗೇ ‘ಬ್ಲಾಗಿಗಳ ಪರಸ್ಪರ ಪರಿಚಯ’ ಅಂತ ಹೇಳಿದ್ದು ಇನ್ನೂ ನೆನಪಿದೆ. ಕಾರ್ಯಕ್ರಮಕ್ಕೆ ನೂರು ಜನ ಬ್ಲಾಗಿಗಳು ಬಂದಿದ್ದರು ಅಂದುಕೊಂಡರೆ, ಅದರಲ್ಲಿ ಪ್ರತಿಶತ ೫೦ ರಷ್ಟು ಮಂದಿ ತಮ್ಮನ್ನು ತಾವು ವೇದಿಕೆಯ ಮೇಲೆ ಪರಿಚಯಿಸಿಕೊಳ್ಳಲು ಇಚ್ಚಿಸೋದಿಲ್ಲ. ಇನ್ನುಳಿದ ೫೦% ಜನರನ್ನಾದರೂ ಕನಿಷ್ಟ ಅವರ ಬ್ಲಾಗ್ ಹೆಸರು, ತಮ್ಮ ಹೆಸರು ಹೇಳಿ ಮುಗಿಸಿ ಪರಿಚಯ ಮಾಡಿಕೊಳ್ಳಲು ಅವಕಾಶ ಕೊಡಬಹುದಿತ್ತು. ಭಾಷಣಕಾರರಿಗೆ ತಲಾ ಇಪ್ಪತ್ತು ನಿಮಿಷ ಸಮಯ ಕೊಡಬಹುದಿತ್ತು. ಸಮಯ ನಿಗಧಿ ಪಡಿಸದಿದ್ದರೆ ಕೆಲವರು ಮಾತಾಡ್ತಲೇ ಇರ್ತಾರೆ. ಅದು ಇಲ್ಲೂ ನಿಜವಾಯಿತು. ಸುಮಾರು ಅಂದರೆ ಬಹುತೇಕೆ ಬ್ಲಾಗಿಗಳು non technical ಹಿನ್ನೆಲೆಯವರಾದ್ದರಿಂದ technical ವಿಷಯಗಳ ಚರ್ಚೆ ಅವರ ಆಕಳಿಕೆಗೆ ಕಾರಣವಾಗುತ್ತೆ. ಅವರು ಎದ್ದು ಹೋಗಲೂಬಹುದು. technical ಜನಗಳ ಸಭೆಯನ್ನು ಬೇರೆಯಾಗಿಯೇ ಇಟ್ಟುಕೊಂಡರೆ ಒಳ್ಳೇದು.

ಎಲ್ಲ ಬ್ಲಾಗಿಗಳನ್ನೂ ಸಾಫ್ಟ್‌ವೇರ್ ಇಂಜಿನೀಯರ್‌ಗಳು ಅಂದುಕೊಳ್ಳೋದು, ಪ್ರಸ್ತಾಪಿಸುತ್ತಿರುವ ತಂತ್ರಜ್ಞಾನ ಇತ್ಯಾದಿಗಳ ಬಗ್ಗೆ ಎಲ್ಲ ಸಾಫ್ಟಿಗಳಿಗೂ ಗೊತ್ತಿರುತ್ತೆ ಅನ್ಕೋಳ್ಳೋದು ಶುದ್ಧಾನುಶುದ್ಧ ತಪ್ಪು. ಮಾತನಾಡಿದವರ ಮಾತುಗಳು ಅರ್ಥವಾಗದೆ ಹೋದರೆ ಬಂದು ಕೂತದ್ದಕ್ಕೆ ಸಾರ್ಥಕ್ಯ ಬಾರದು. ಕಾರ್ಯಕ್ರಮಕ್ಕೆ ಬಂದಿದ್ದು ಯಾರು ಯಾರೆಂದು ಗೊತ್ತಾಗದೇ ಹೋಗೋದು ಸಾರ್ವಜನಿಕ ಸಮಾರಂಭಗಳ ವಿಪರ್ಯಾಸ. ಆದ್ರೆ ಬ್ಲಾಗಿಗಳ ಸಮಾವೇಶ ಆತ್ಮೀಯರ ಆಪ್ತ ಮಿಲನ. ಅಷ್ಟರ ಮಟ್ಟಿಗೆ ಮುಂದಿನ ಸಭೆಗಳಾದರೂ ಆಪ್ತವಾಗಲಿ. After all ಇವೆಲ್ಲ ಕೊಂಕನ್ನು ನೀವು off the record ಅಂತಿಟ್ಟುಕೊಳ್ಳಿ.

ಉಳಿದಂತೆ ಕೆಲವು ಒಳ್ಳೆ ಆಲೋಚನೆಗಳು-ಸಲಹೆಗಳು ಬ್ಲಾಗಿಗಳನ್ನೆಲ್ಲ ಚಿಂತನೆಗೀಡು ಮಾಡುವಂತವು.

* ಕನ್ನಡದ ಬ್ಲಾಗುಗಳು ಕಥೆ-ಕವನ-ಅನುಭವ-ವಿಮರ್ಶೆಗಳ ಪರಿಧಿಯಿಂದಾಚೆಗೆ ಬೆಳೆದು ಮಾಹಿತಿ ಖಣಜಗಳಾಬೇಕು. ಭಾವಲೋಕ ಬಿಟ್ಟು ಭೂಲೋಕದ ಬಗ್ಗೆ ಬರೀಬೇಕು.

* ಪ್ರತಿಯೊಬ್ಬರೂ ಸ್ವತಂತ್ರ ತಾಣಗಳನ್ನು ಹೊಂದುವಂತಾಗಬೇಕು-ಆ ಮೂಲಕ ದೊಡ್ಡ ಕಂಪನಿಗಳ ಅವಲಂಬನೆ ತಪ್ಪಿಸಿಕೊಳ್ಳಬೇಕು.

* ಕರ್ನಾಟಕದ ಎಲ್ಲಾ ಭಾಗಗಳ ವಿದ್ಯಾವಂತರೂ ಬ್ಲಾಗುಗಳಿಗೆ ತೆರೆದುಕೊಳ್ಳುವಂತಾಗಬೇಕು.
ಕೊಡಗು, ಉತ್ತರ ಕರ್ನಾಟಕ ಮುಂತಾದ ಪ್ರದೇಶಗಳ ಜನರ ಬ್ಲಾಗುಗಳು ಬಹಳ ಕಡಿಮೆ. ಈಗಿನ ಅಂದಾಜಿನಂತೆ ಮಲೆನಾಡು-ಕರಾವಳಿ ಬ್ಲಾಗಿಗಳು ಜಾಸ್ತಿ ಸಂಖ್ಯೆಯಲ್ಲಿದ್ದಾರೆ.

* ಕನ್ನಡ ನೆಲದ , ಸಂಪದದಂತಹ ಪ್ರಯತ್ನಗಳನ್ನು ಇನ್ನಷ್ಟು ಬಲಗೊಳಿಸಬೇಕು.

* ಆರ್ಕುಟ್‌ನಂತಹ ತಾಣ ಕನ್ನಡಕ್ಕೆ ಬೇಕೆಂದುಕೊಂಡರೂ ಅದರ ಅಸಾಧ್ಯತೆಗಳ ಅರಿವಿರುವುದರಿಂದ ಇನ್ನುಳಿಕೆ ಕೆಲಸಗಳತ್ತ ತಂತ್ರಜ್ಞರ ಗಮನ ಹರಿಯಬೇಕು.

* Non unicode ಪರಿಸರಕ್ಕೆ unicode ಬ್ಲಾಗುಗಳು\ತಾಣಗಳು ತಲುಪಲಾಗದ ವಿಪರ್ಯಾಸ. ಅಷ್ಟರಮಟ್ಟಿಗೆ ಗ್ರಾಮೀಣರು ಬ್ಲಾಗಿನಿಂದ ದೂರ.

* ವಿವಿಧ ವಯೋಮಾನದವರ ಅಗತ್ಯಗಳ ಕುರಿತಾದ ಬ್ಲಾಗ್‌ಗಳು ಬರಲಿ. ಬಹಳ ಗಂಭೀರ ಸಲಹೆ. ಏಕೆಂದರೆ ಎಲ್ಲರಿಗೂ ದಟ್ಸ್‌ಕನ್ನಡ ಗ್ಯಾಲರಿ ತರದ್ದೆ ಬೇಕಾಗೋಲ್ಲ.

* Technology ಇರೋದು ಭಾಷೆಯನ್ನ ಉಳಿಸಿಕೊಳ್ಳುವುದಕ್ಕೆ-ಬಂಗಾರದಂತಹ ಮಾತು.

* ಕನ್ನಡ ಬ್ಲಾಗ್ ಕ್ರಾಂತಿಯ ಇಂದಿನ ದಿನಗಳಲ್ಲಿ ಬರಹ ವಾಸುರವರ ಕೊಡುಗೆಯನ್ನು ನೆನೆದದ್ದು(ಶ್ಯಾಂ ಮಾತುಗಳಲ್ಲಿ) ಅಷ್ಟರ ಮಟ್ಟಿಗೆ ಅವರಿಗೆ ಕೃತಜ್ಞತೆ ಸಲ್ಲಿಸಿದಂತೆ.

* ಕನ್ನಡಕ್ಕೆ OCR, speech to text, ಒಳ್ಳೆಯ search engine dictionary, ತುಂಗಾ ಫ್ಹಾಂಟ್ ಸಮಸ್ಯೆ ಮುಂತಾದ ಕನ್ನಡ ಕಂಪ್ಯೂಟಿಂಗ್‌ ಕುರಿತಂತೆ ಬಹಳಷ್ಟು ಬಾರಿ ಪ್ರಸ್ತಾಪಿತವಾದ ಬೇಡಿಕೆ-ಪ್ರಸ್ತಾವನೆಗಳು.( ಹರಿಯವರ ಮಾತುಗಳಲ್ಲಿ).

* ಕನ್ನಡದ ಮಾರ್ಕೆಟಿಂಗ್ ಸರಿಯಿಲ್ಲ. ಯಾವ ಬ್ಲಾಗಿಗಳೂ hitsಗಳಿಂದ ದುಡ್ಡು ಮಾಡ್ಬೋದು ಅನ್ನೋದರ ಕಡೆ ಗಮನ ಹರಿಸಿಲ್ಲದಿರುವುದು. ಆದ ಕಾರಣ ಕನ್ನಡ ಬ್ಲಾಗ್-ಜಾಹಿರಾತು ಲೋಕ ಹಿಂದೆ ಬಿದ್ದಿರುವುದು-non commercial art cenemaಗಳ ತರ.


ಇಷ್ಟೆಲ್ಲಾ ಚರ್ಚೆಯಾಯಿತೆ? ಅಂತಾ ಯೋಚಿಸುವಷ್ಟರಲ್ಲಿ-

ಶ್ಯಾಂ, ಅರೆ-ನಗ್ನ ಸುಂದರಿಯರು ತಂದು ಕೊಡುತ್ತಿರುವ hits ಬಗ್ಗೆ ಒಪ್ಪಿಕೊಂಡದ್ದು. ಹಾಗಿದ್ದರೆ ಇನ್ಮುಂದೆ ದಟ್ಸ್‌ಕನ್ನಡಕ್ಕೆ ಲಿಂಕ್ ಕೊಡೋವಾಗ "ಅರೆನಗ್ನ ಚಿತ್ರಗಳಿಗೆ ಕ್ಲಿಕ್ಕಿಸಿ" ಎಂದು ನಮ್ಮ ಬ್ಲಾಗ್‌ಗಳಲ್ಲಿ ಹಾಕಿಕೊಂಡರೆ ಹೇಗೆ ಎಂದು ನಾವು ನಾವೇ ಮಾತಾಡಿಕೊಂಡದ್ದು. ಮಾತನಾಡಿದ ಮಹನೀಯರೊಬ್ಬರು ತಮ್ಮ ಇಷ್ಟು ವರ್ಷಗಳ ಶ್ರಮ(?) ಹೇಳಿಕೊಂಡ ಮುಖಭಾವದಲ್ಲಿ ವ್ಯಕ್ತವಾಗುತ್ತಿದ್ದ ವ್ಯಂಗ್ಯ.
ನೆನಪು-ನೇವರಿಕೆಯ ಸಿಂಧು, ಲಿನಕ್ಸಾಯಣದ ಶಿವಪ್ರಕಾಶ್, ಸುನಿಲ್, ಭಾವಲೋಕದ ಹರೀಶ್, ಪಂಚ್‌ಲೈನ್ ಗಣೇಶ್, ಮಜಾವಾಣಿಯ ಸಂಪಾದಕರು ಮುಂತಾದವರಲ್ಲಿ ಕೆಲವರ ಮುಖ ನೋಡಿದ್ದು-ಒಂದಿಷ್ಟು ಪರಿಚಯ ಮಾಡಿಕೊಂಡದ್ದು. ಹರಿಯ ಒಳ್ಳೆ ಭಾವಚಿತ್ರ ತೆಗೆಯಲಾಗದೆ ಒದ್ದಾಡಿದ್ದು, ಅಮೇರಿಕದಿಂದ ವಿಕ್ರಮ್ ಹತ್ವಾರ್ ಮುಂತಾದ ಗೆಳೆಯರು ಬ್ಲಾಗೀ ಸಮಾವೇಶದ ಬಗ್ಗೆ ವಿಚಾರಿಸಿದ್ದು- ನನ್ನ ಕಡೆಯ highlights.

ಚೇತನಾ ಮುಂತಾದ ಅನೇಕ ಪ್ರಮುಖ ಬ್ಲಾಗಿಗಳು ಬಾರದಿದ್ದದ್ದು ಯಾಕೋ ಗೊತ್ತಿಲ್ಲ.

ಪ್ರಣತಿಯ ವಿಜಯ ಪ್ರಸನ್ನ, ಅರುಣ್, ಶ್ರೀನಿವಾಸ್, ಶ್ರೀನಿಧಿ, ಸುಶ್ರುತ ಮುಂತಾದವರಿಗೆ ನನ್ನ ಪ್ರೀತಿಪೂರ್ವಕ ಧನ್ಯವಾದ. ಅವರ ಪ್ರಯತ್ನ ಎಣೆಯಿಲ್ಲದ್ದು-ಆಕಾಶಕ್ಕೆ ಕಟ್ಟಿದ ದೀಪದ ಬುಟ್ಟಿಯಂತಹ ದಿವ್ಯತನದ್ದು.

ಸಿಗೋಣ
ಅರೇಹಳ್ಳಿ ರವಿ

ಜನಪ್ರಿಯ ಲೇಖನಗಳು