6.17.2008

ಚಾಪೆ, ರಂಗೋಲಿ ಕೆಳಗೆ ತೂರುವವರ ನಡುವೆ ಕಾಪಿರೈಟೂ, ಕಾನೂನೂ...

ಬರಹಗಾರರು-ವಿಶಾಲಮತಿ, `ಪುಸ್ತಕ ಪ್ರೀತಿ' ಬ್ಲಾಗ್

ಅಂತರ್ಜಾಲದ ಓದುಗರಿಗೆ ಕನ್ನಡ ಪುಸ್ತಕಗಳ ಬಗೆಗಿನ ಪ್ರೀತಿಯನ್ನು ಬೆಳೆಸಬೇಕೆಂಬ ಉದ್ದೇಶದಿಂದ ಬ್ಲಾಗ್ ಪ್ರಪಂಚದಲ್ಲಿ ಕಾಲಿಟ್ಟ ನನಗೆ, ಈ ಸಾಹಸ (ಹೊಸದಾಗಿ ಮಾಡುವುದೆಲ್ಲವೂ ಸಾಹಸವೇ ಅಲ್ಲವೇ?) ಪ್ರಾರಂಭಿಸಿದ ಹೊಸ ಹೊಸದರಲ್ಲೇ, ಕನ್ನಡಸಾಹಿತ್ಯ.ಕಾಂ ನೇತೃತ್ವದಲ್ಲಿ ನಡೆದ ‘ಅಂತರ್ಜಾಲ ಬಗೆಗಿನ ಈ ಕಾರ್ಯಕ್ರಮ ತುಂಬಾ ಖುಷಿ ಕೊಟ್ಟಿತು.
‘ಅಂತರ್ಜಾಲ ಎಂದೊಡನೆ ಇಂಗ್ಲೀಷ್ ಎಂದುಕೊಳ್ಳದಂತೆ ಅಪ್ಪಟ ಕನ್ನಡದಲ್ಲೇ ನಡೆದ ಕಾರ್ಯಕ್ರಮವಾಗಿ ಇನ್ನಷ್ಟು ಖುಷಿ ಕೊಟ್ಟಿತು.
ಕನ್ನಡ ಸಾಹಿತ್ಯ.ಕಾಂ ತನ್ನ ೮ ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು ಸಂದರ್ಭಕ್ಕನುಗುಣವಾಗಿ ಅಂತರ್ಜಾಲ (ಬ್ಲಾಗ್) ನಲ್ಲಿ ಕನ್ನಡದ ಬಳಕೆಯ ಆವಶ್ಯಕತೆ ಹಾಗೂ ಈ ನಿಟ್ಟಿನಲ್ಲಿ ಅದು ಎದುರಿಸುತ್ತಿರುವ ಸವಾಲುಗಳನ್ನು ವಿಶ್ಲೇಷಿಸಲೆಂದೇ ನಡೆಸಿದ ಕಾರ್ಯಕ್ರಮ ಇದು.

ಇದರಲ್ಲಿ ಅಂತರ್ಜಾಲದೊಡನೆ ಪ್ರಾದೇಶಿಕ ಭಾಷೆಗಳು ಅದರಲ್ಲೂ ಕನ್ನಡ ಸಂಸ್ಕೃತಿ, ಪುಸ್ತಕೋದ್ಯಮ, ಸಂಗೀತ, ಸಿನೆಮಾ ಹಂಚಿಕೆಗಳು ತಳುಕು ಹಾಕಿಕೊಂಡಿವೆ. ಅಂತರ್ಜಾಲದಿಂದಾಗಿ ಈ ಎಲ್ಲಾ ಅಂದರೆ ಕನ್ನಡ ಸಂಸ್ಕೃತಿಗೆ, ಪುಸ್ತಕೋದ್ಯಮಕ್ಕೆ, ಸಂಗೀತಕ್ಷೇತ್ರ ಹಾಗೂ ಸಿನೆಮಾಕ್ಷೇತ್ರಕ್ಕೆ ಧಕ್ಕೆಯಾಗಬಹುದು. ಕಾಪಿರೈಟ್‌ನ ಸರಿಯಾದ ಜಾರಿಯಿಲ್ಲದೇ ಅಂತರ್ಜಾಲದಲ್ಲಿ ಪ್ರಕಟಿಸಲ್ಪಟ್ಟ ಪುಸ್ತಕ, ಸಂಗೀತ, ಸಿನೇಮಾ ಮುಂತಾದವುಗಳಿಂದಾಗಿ ಆಯಾ ಉದ್ಯಮಗಳಲ್ಲಿ ಈಗಾಗಲೇ ದುಡಿಯುತ್ತಿರುವವರ ಉದ್ಯಮಕ್ಕೆ ಧಕ್ಕೆ ಒದಗಬಲ್ಲದು ಎಂಬ ಆತಂಕ ಒಂದು ಅಭಿಪ್ರಾಯವಾದರೆ ಈ ಅಂತರ್ಜಾಲವನ್ನು ಈ ಉದ್ದಿಮೆಗಾಗಿಯೇ ಉಪಯೋಗಿಸಿಕೊಳ್ಳಬಹುದಾದ ಸಾಧ್ಯತೆಯ ಆಶಯ ಇನ್ನೊಂದು ಅಭಿಪ್ರಾಯವಾಗಿ ಇಲ್ಲಿ ಹೊರಹೊಮ್ಮಿತು.

ಕನ್ನಡ ಸಾಹಿತ್ಯ.ಕಾಂ ಬಳಗದವರು ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ ವಿವಿದ ಕ್ಷೇತ್ರಗಳ ಮಹಾನುಭಾವರು ಪ್ರಬಂಧ ಮಂಡಿಸಿದರು.

ಪ್ರಾರಂಭದಲ್ಲಿ ಅಂತರ್ಜಾಲದ ಸಂದರ್ಭದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಸೃಜನಶೀಲತೆಯ ಗತಿ ಸ್ಥಿತಿ, ಸವಾಲುಗಳು ಪ್ರಬಂಧ ಮಂಡಿಸಿದ ಪ್ರಕಾಶ್ ಬೆಳವಾಡಿಯವರು.

ಅಂತರ್ಜಾಲ ಒಂದು ಅದ್ಬುತವಾದ ಮಾದ್ಯಮ. ಇದು ರುಚಿ ಮತ್ತು ಸ್ಪರ್ಶ ಎರಡನ್ನು ಬಿಟ್ಟು ಇನ್ನೆಲ್ಲಾ ರೀತಿಯ (ದೃಶ್ಯ, ಶೃವ್ಯ ಇತ್ಯಾದಿ) ಆನಂದ ನಮ್ಮದಾಗಿಸುತ್ತದೆ. ಇದೊಂದು ಅದ್ಭುತ ಮಾದ್ಯಮ ಯಾಕೆಂದರೆ ಇದಕ್ಕೆ ಅಕ್ಷರಸ್ತರು ಅನಕ್ಷರಸ್ತರು ಎಂಬ ಬೇದವಿಲ್ಲ. ಇನ್ನು ಮುಂದೆ ಅನಕ್ಷರಸ್ತರೂ ತಮಗೆ ಬೇಕಾದ ವಿಷಯದಲ್ಲಿ ಜ್ಞಾನವನ್ನು ಇತರರ ಸಹಾಯವಿಲ್ಲದೆ ಪಡೆಯಬಲ್ಲರು. ಹೀಗೆ ಅಂತರ್ಜಾಲದಿಂದ ಸಮಾಜಕ್ಕೆ ಆಗುವ ಉಪಯೋಗಗಳನ್ನು ತಿಳಿಸುತ್ತಾ, ಅಂತರ್ಜಾಲದ `content free' ವ್ಯವಸ್ಥೆಯು ‘ `content producer' ಗಳಿಗೆ ಜಾಹೀರಾತುಗಳಿಂದ ಸಂಭಾವನೆ ಪಡೆಯುವಂತೆ ಆಗಬಹುದು. ಇದರಿಂದ ‘person to person' ಬದಲಾಗಿ `person to community' ವ್ಯವಸ್ಥೆ ನಿರ್ಮಾಣವಾಗುತ್ತದೆ ಎಂದರು.

ಪ್ರಾದೇಶಿಕ ಭಾಷೆಯಾದ ಕನ್ನಡದ ಲಿಪಿಯು ಕಂಪ್ಯೂಟರ್‌ನಲ್ಲಿ ಅಳವಡಿಸಲು ಕಷ್ಟಸಾಧ್ಯವಾದದ್ದರಿಂದ ಕನ್ನಡ ಲಿಪಿಯನ್ನು ನವೀಕರಿಸಬೇಕು. ಕನ್ನಡ ಲಿಪಿಯು linear ಆಗಿದ್ದಲ್ಲಿ ಇದು ಸುಲಭವಾಗಿರುತ್ತಿತ್ತು. ಯಾವುದೇ ಭಾಷೆಯು ನವೀಕರಣಕ್ಕೊಳಗಾಗಲಾರದ ಮಡಿವಂತಿಕೆ ಮೆರೆದರೆ ಅದು ಉಳಿಯುವುದಾಗಲೀ ಬೆಳೆಯುವುದಾಗಲೀ ಸಾಧ್ಯವಿಲ್ಲ. ಲಿಪಿಯನ್ನು ನವೀಕರಿಸಿದಲ್ಲಿ ಅದು ಕನ್ನಡ ಸಂಸ್ಕೃತಿಗೆ ಧಕ್ಕೆ ಎಂದು ತಿಳಿಯಬೇಕಾಗಿಲ್ಲ. ಒಂದು ಭಾಷಾ ಸಂಸ್ಕೃತಿಯು ಬರಿದೇ ಅದರ ಲಿಪಿಯಲ್ಲಿಲ್ಲ. ಕನ್ನಡ ಲಿಪಿಗೆ ಹೊರತಾದ ಲಿಪಿಯಿಂದ ದಾಖಲಿಸಲಾಗದ ಎಷ್ಟೋ ಭಾವಗಳು ಕನ್ನಡ ಸಂಸ್ಕೃತಿಗೆ ಹೊರತು ಎಂದು ತಿಳಿಯಬೇಕಾಗಿಲ್ಲ.

ಮುಂದಿನ ಪ್ರಬಂಧ ವಿಷಯ ಅಂತರ್ಜಾಲ - ಪುಸ್ತಕೋದ್ಯಮ. ಪ್ರಬಂಧಕಾರ ಪ್ರಕಾಶ್ ಕಂಬತ್ತಳ್ಳಿ ಯವರು ಅಂತರ್ಜಾಲದಲ್ಲಿ ಪುಸ್ತಕದ ವಿತರಣೆ ಕುರಿತು ಆತಂಕ ವ್ಯಕ್ತಪಡಿಸಿದರು. ಇದರಿಂದ ಪುಸ್ತಕೋದ್ಯಮಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದರು. ಅವರು ಕನ್ನಡ ಸಂಸ್ಕೃತಿ ಬೆಳೆಯಬೇಕೆಂದರೆ ಶಾಲೆಗಳಲ್ಲಿ ೧ ರಿಂದ ೧೦ ನೇ ತರಗತಿಯವರೆಗೂ ಕನ್ನಡ ಒಂದು ವಿಷಯವಾಗಿ ಕಡ್ಡಾಯವಾಗಬೇಕು ಎಂದರು.

ಮುಂದಿನ ಪ್ರಬಂಧ ವಿಷಯ ಅಂತರ್ಜಾಲ - ಸಂಗೀತ ಹಂಚಿಕೆ. ಪ್ರಬಂಧಕಾರ ಲಹರಿ ವೇಲು ಎಂದೇ ಪ್ರಖಾತರಾದ ತುಳಸಿರಾಮ್ ನಾಯ್ಡು ರವರು ಸಹ ಸಂಗೀತ ಲೋಕದ ‘ ಛಿoಟಿಣeಟಿಣ ಠಿಡಿoಜuಛಿeಡಿ ಗಳಿಗೆ ತಮ್ಮ ಕೆಲಸದಲ್ಲಿ ಆಸಕ್ತಿಕಳೆದುಕೊಳ್ಳಬಹುದಾದಂತಹ ಪರಿಸ್ಥಿತಿ ಉದ್ಭವವಾಗಬಹುದು ಎಂಬ ಆತಂಕ ತೋರಿದರು.

ಕೊನೆಯ ಪ್ರಬಂಧದ ವಿಷಯ ಅಂತರ್ಜಾಲ-ಸಿನೆಮಾ. ಪ್ರಬಂಧಕಾರ ಖ್ಯಾತ ನಿರ್ದೇಶಕ ಗುರುಪ್ರಸಾದ್ ಕೆ.ಆರ್. ಅವರು ‘content'ನಲ್ಲಿ ಬಲವಿದ್ದರೆ ಅಂತರ್ಜಾಲದಿಂದ ಸಿನೆಮಾ ಪ್ರಪಂಚಕ್ಕೆ ಯಾವ ತೊಂದರೆಯೂ ಬರಲಾರದು ಎಂಬ
ಭರವಸೆಯ ಮಾತನಾಡಿದರು.

ಎಲ್ಲಾ ಪ್ರಬಂಧಗಳ ಮಂಡನೆ ನಂತರ ಪ್ರಶ್ನೋತ್ತರಗಳಿಗೆ ಅವಕಾಶವಿದ್ದು ಕೇಳುಗರು ಅದನ್ನು ಚೆನ್ನಾಗೇ ಉಪಯೋಗಿಸಿಕೊಂಡದ್ದು ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು. ಯಾವುದೇ ಕಾರಣಕ್ಕೆ ಅಂತರ್ಜಾಲ ಒಂದು ಇಲ್ಲಿನ ಎಲ್ಲಾ ಉದ್ಯಮಗಳನ್ನು ನುಂಗಿ ನೀರು ಕುಡಿಯುವ ರಾಕ್ಷಸನಲ್ಲ. ಅಂತರ್ಜಾಲವನ್ನು ಸರಿಯಾದ ನಿಟ್ಟಿನಲ್ಲಿ ಉಪಯೋಗಿಸಿಕೊಂಡಲ್ಲಿ ಅದು ಇಲ್ಲಿನ ಎಲ್ಲಾ ಉದ್ಯಮಗಳಿಗೆ ಪೂರಕವಾಗಿ ನಿಲ್ಲಬಲ್ಲದು ಎಂದು ಕೇಳುಗರ ಒಟ್ಟಭಿಪ್ರಾಯವಾಗಿತ್ತು.

ಕೊನೆಯಲ್ಲಿ ಮಾತನಾಡಿದ ಅಧಮ್ಯ ಸಂಸ್ಥೆಯ ಟಿ.ಜೆ.ಯತೀಂದ್ರನಾಥ್ ಅವರು ಕನ್ನಡ ನುಡಿ ಸಂಸ್ಕೃತಿಯನ್ನು
ಉಳಿಸಿಕೊಳ್ಳುವುದು ನಮ್ಮಿಂದ ಮಾತ್ರಾ ಸಾಧ್ಯ. ಕನ್ನಡ ಉಳಿಸಿ ಬೆಳೆಸಿಕೊಂಡು ಹೋಗುವುದಕ್ಕೆ ನಮಗೆ ಆಗುತ್ತಿಲ್ಲ ಎಂದು ಹೇಳಲು ನೂರು ಕಾರಣಗಳು ದೊರೆಯಬಹುದು ಆದರೆ ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದೇ. ಕನ್ನಡವನ್ನು ಎಲ್ಲಾ ಕಡೆಯಲ್ಲಿ ಬಳಸಿಯೇ ಕನ್ನಡವನ್ನು ಉಳಿಸಲು ಸಾಧ್ಯ. ನಾವು ಕನ್ನಡದವರೆಂದು ಕೊರಗುವ ಕಾರಣವಿಲ್ಲ ಕನ್ನಡದ ಬಗ್ಗೆ ಕಾಳಜಿ ತೋರಿಸಿ ಎಂದು ಕರೆ ಕೊಟ್ಟರು.

ಈ ನಡುವೆ ಬ್ರೌಸರ್‌ನಲ್ಲೇ ಕನ್ನಡ ಆನ್ಸಿ ಹಾಗೂ ಯೂನಿಕೋಡ್ ಎರಡನ್ನೂ ಕೀ ಇನ್ ಮಾಡಲು ಸಾಧ್ಯವಾಗುವ ಸ್ಕ್ರಿಪ್ಟ್ ಹಾಗೂ ಕನ್ನಡ ಸ್ಪೆಲ್ ಚೆಕರ್ (ಯೂನಿಕೋಡ್ ಮತ್ತು ಯೂನಿಕೋಡೇತರ) ಪ್ಲಗ್ ಇನ್ ಪ್ರಾತ್ಯಕ್ಷಿಕೆ ಇತ್ತು. ಇದನ್ನು ನಡೆಸಿಕೊಟ್ಟವರು ರಾಘವ ಕೊಟೆಕಾರ್ ಮತ್ತು ರುದ್ರಮೂರ್ತಿಯವರು.

2 comments:

ವಿ.ರಾ.ಹೆ. said...

ಇಂತಹ ಒಂದು ಮಾಹಿತಿ ಪೂರ್ಣ ಕಾರ್ಯಕ್ರಮವನ್ನು ನೆಡೆಸಿಕೊಟ್ಟ ಕನ್ನಡಸಾಹಿತ್ಯ.ಕಾಂ ನ ಎಲ್ಲರಿಗೂ ಧನ್ಯವಾದಗಳು.

Anonymous said...

ಅರ್ಥಪೂರ್ಣ ಸಮ್ಮೇಳನ, ಚರ್ಚಾ ಕೂಟ ನೆಡೆಸಿದ ಕನ್ನಡಸಾಹಿತ್ಯ.ಕಾಂ ಗೆ ಧನ್ಯವಾದಗಳು
ಇನ್ನೊಮ್ಮೆ ಬ್ಲಾಗಿಗರ ಸಮ್ಮೇಳನ ನೆಡೆಯಲಿ.

ಗಣೇಶ್.ಕೆ

ಜನಪ್ರಿಯ ಲೇಖನಗಳು