6.01.2008

ಮತ್ತೂ ಒಂದು ವಿಚಾರಸಂಕಿರಣ...!

ಕೆಲವೊಮ್ಮೆ ಹಾಗಾಗುತ್ತೆ. ಎದುರಾಗುವ ಪ್ರತಿ ಸನ್ನಿವೇಷವೂ ನಮಗೆ ವಿರುದ್ಧವಾಗಿ ವರ್ತಿಸುತ್ತಿರುತ್ತದೆ.
ಕನ್ನಡ ಅಂತರ್ಜಾಲ ಜಗತ್ತಿನಲ್ಲಿ ಕನ್ನಡದ ಪ್ರಾತಿನಿಧ್ಯತೆಯನ್ನು ಐದಾರು ವರ್ಷಗಳ ಕಾಲ ಸಮರ್ಥವಾಗಿ ಎತ್ತಿ ಹಿಡಿದ ಕನ್ನಡಸಾಹಿತ್ಯ.ಕಾಂ ಅನ್ನುವ ಕನ್ನಡದ ಶ್ರೇಷ್ಠ ಕೃತಿಗಳ ಆಕರ ತಾಣಕ್ಕೂ ಸನ್ನಿವೇಷಗಳು ವಿರುದ್ಧವಾಗಿದ್ದವು. ಅಗಾಧ ಸಂಖ್ಯೆಯ ಬೆಂಬಲಿಗರೂ, ಓದುಗರೂ ಇದ್ದರೂ ತಾಣ ಸುಮಾರು ಒಂದೂವರೆ ವರ್ಷಗಳ ಕಾಲ ನಿಂತೇ ಹೋಗಿತ್ತು. ಏನೆಂದು ಹೇಳೋದು? ಡಿಜಿಟಲ್ ಜಗತ್ತಿನಲ್ಲಿ ಎಲ್ಲವೂ ಕ್ಷಣಿಕವೆಂಬುದನ್ನು ನಿಜ ಮಾಡಲೋ ಎಂಬಂತೆ ನಮ್ಮ ಸರ್ವರ್‌ಗಳೂ, ಹಾರ್ಡ್‌ಡಿಸ್ಕ್‌ಗಳೂ ಏಕಕಾಲಕ್ಕೆ ಕೈಕೊಟ್ಟು ಅಗಾಧವಾದ ಕಂಟೆಂಟ್ ಒಂದೇ ದಿನದಲ್ಲಿ ಬರಿದಾಯಿತು. ಬ್ಯಾಕ್‌ಅಪ್ ಅನ್ನೋದನ್ನು ಎಷ್ಟು ಕಡೆ ಅಂತ ಇಡೋಕೆ ಸಾಧ್ಯ? ಆದರೂ ಬ್ಯಾಕ್‌ಅಪ್‌ ಕುರಿತಂತೆ ತೋರಿದ ಅಲ್ಪ ಉದಾಸೀನ ಅಷ್ಟೋದು ಡೇಟಾ ಕಳೆದುಕೊಳ್ಳಲು ಕಾರಣವಾಯಿತೇನೋ...? ಈಗ ಎಲ್ಲಾ ಸರಿಯಾದ ಮೇಲೆ ಕಾರಣಗಳನ್ನು ಕೊಡೋದು ಬಾಲಿಶತನವೇನೂ ಅಲ್ಲವೆಂದು ನನ್ನ ಭಾವನೆ.

ಇರಲಿ. ಕಳೆದ ಒಂದೂವರೆ ವರ್ಷ ಕನ್ನಡಸಾಹಿತ್ಯ.ಕಾಂ ತಂಡ ಸುಮ್ಮನೇನೂ ಕುಳಿತಿಲ್ಲ. ಕಳೆದುಹೋದ ಡೇಟಾವನ್ನು ಹೆಚ್ಚೂ ಕಮ್ಮಿ ಹುಡುಕಿ ಮರಳಿ ಪಡೆಯುವ ಜೊತೆಗೆ ಅದನ್ನು ಒಂದು ಯೋಜಿತ ರೀತಿಯಲ್ಲಿ ತನ್ನದೇ ‘ಸಂಪೂರ್ಣ ಫೀನಿಕ್ಸ್’ ಕೃತಿ ನಿರ್ವಹಣಾ ವ್ಯವಸ್ಥೆಗೆ ಅಳವಡಿಸಿದೆ. ಈ ಮಧ್ಯೆ ತಾಣ ನಿಂತು ಹೋದದ್ದರಿಂದ ಬೆಂಬಲಿಗರ ಬಳಗದ ಚಟುವಟಿಕೆಗಳೂ ನಿಂತುಹೋದವು. ಮುಂಚೂಣಿಯಲ್ಲಿದ್ದವರನೇಕರು ಉದ್ಯೋಗ ನಿಮಿತ್ತ ದೂರದ ಊರುಗಳಿಗೆ ಹೋದರು. ಆದಾಗ್ಯೂ ಹೇಗಾದರೂ ಮಾಡಿ ಕನ್ನಡಸಾಹಿತ್ಯ.ಕಾಂ ಕನ್ನಡ ಅಂತರ್ಜಾಲ ಜಗತ್ತಿಗೆ ಮರಳಿ ಬರಬೇಕೆನ್ನುವ ನಮ್ಮ ಅಭಿಲಾಶೆ ಗಟ್ಟಿಯಾಗಿತ್ತು. ಈವತ್ತು ಅದು ಸಾಧ್ಯವೂ ಆಗುತ್ತಿದೆ. ಸಂಪಾದಕರಾದ ಶೇಖರಪೂರ್ಣ, ಬಳಗದ ತಾಂತ್ರಿಕ ತಂಡದ ರಾಘವ ಕೋಟೆಕಾರ್ ಕನ್ನಡಸಾಹಿತ್ಯ.ಕಾಂನ ಮರುಹುಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರಿಗೆ ಬಳಗದ ಕೃತಜ್ಞತೆಗಳನ್ನು ಅರ್ಪಿಸುತ್ತಾ...

ಮೊನ್ನೆ ಮೇ ೧ರ ಗುರುವಾರ ನಡೆದ ಕೆ ಎಸ್ ಸಿ ಬೆಂಬಲಿಗರ ಸಭೆ ಸಮಾರಂಭ ಕುರಿತಂತೆ ಸುಧೀರ್ಘವಾಗಿ ಚರ್ಚಿಸಿತು. ಕಾರ್ಯಕ್ರಮದ ಸ್ಥಳ, ದಿನಾಂಕವನ್ನು ನಿರ್ಧರಿಸಿತು. ಸಮಾರಂಭದ ಆಯೋಜನೆಗೆ ಮುಂಚೂಣಿಯಲ್ಲಿರುವ ಸದಸ್ಯರನ್ನೊಳಗೊಂಡ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಗಳಿಗೆ ದಿನಾಂಕ ೧೧-೦೫-೨೦೦೮ ಮತ್ತು ೩೧-೦೫-೨೦೦೬ರಂದು ನಡೆದ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ವಿಸ್ಮೃತ ರೂಪ ನೀಡಲಾಯಿತು.

ಕನ್ನಡಸಾಹಿತ್ಯ.ಕಾಂ ಮುಂದಿನ ಜೂನ್ ೮ನೇ ತಾರೀಖು ಭಾನುವಾರ ಮತ್ತೆ ತನ್ನ ಎಂದಿನ ವೈಭವದೊಂದಿಗೆ ಅಂತರ್ಜಾಲ ಲೋಕಕ್ಕೆ ಸೇರ್ಪಡೆಗೊಳ್ಳಲಿದೆ. ಅದೂ ಒಂದು ಅರ್ಥಪೂರ್ಣವೆನಿಸುವ ಕಾರ್ಯಕ್ರಮದ ಮೂಲಕ. ಮರುಹುಟ್ಟನ್ನು ೮ನೇ ವಾರ್ಷಿಕೋತ್ಸವವೆಂದು ಹೆಸರಿಟ್ಟು ಕನ್ನಡದ ಯುವ ಮನಸ್ಸುಗಳ ಮಧ್ಯೆ ಆಚರಿಸಿ ಸಂಭ್ರಮಿಸುವ ಹಂಬಲ ನಮ್ಮದು. ಕಾರ್ಯಕ್ರಮ ’ಕ್ರೈಸ್ಟ್ ಕಾಲೇಜ್ ಆಫ್ ಲಾ’ದ ಸಭಾಂಗಣ, ಹೊಸೂರು ರಸ್ತೆ, ಬೆಂಗಳೂರು ಇಲ್ಲಿ ನಡೆಯುವುದೆಂದು ನಿರ್ಧರಿಸಲಾಗಿದೆ. ಕಾರ್ಯಕ್ರಮಕ್ಕೆ ನಿರ್ದೇಶಕರಾದ ಪ್ರಕಾಶ ಬೆಳವಾಡಿ, ಗುರುಪ್ರಾಸ್ ಬಿ ಆರ್, ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ, ಲಹರಿ ಆಡಿಯೋದ ವೇಲು, ಕೆಟುಕೆ ಟೆಕ್ನಾಲಜೀಸ್ ಸಾಫ್ಟ್‌ವೇರ್‌ನ ಸಿ ಇ ಓ ಯತೀಂದ್ರರವರು ಭಾಗವಹಿಸುವುದು ಬಹುತೇಕ ಖಚಿತವಾಗಿದೆ. ಅವತ್ತು ‘ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು’, ಎಂಬ ವಿಷಯದ ಮೇಲೆ ಮಾತುಕಥೆಗಳಾಗಲಿವೆ. ಸಮಯ, ಉತ್ಸಾಹ ಇದ್ದರೆ ಇನ್ನೊಂದು ವಿಶಿಷ್ಟ ಕಾರ್ಯಕ್ರಮ ‘ಬ್ಲಾಗೀ ಮಾತುಕತೆ’ ಹಮ್ಮಿಕೊಳ್ಳುವ ಯೋಜನೆಯೂ ಇದೆ.

ಕಾರ್ಯಕ್ರಮದ ರೂಪುರೇಷೆಗಳು ಇಂತಿವೆ.
ಬೆಳಗಿನ ೧೦-೩೦ಕ್ಕೆ ಕನ್ನಡಸಾಹಿತ್ಯ.ಕಾಂ ೮ನೇ ವಾರ್ಷಿಕೋತ್ಸವ ಉದ್ಘಾಟನೆ.
ಕನ್ನಡಸಾಹಿತ್ಯ.ಕಾಂ ಮತ್ತು ಅದರ ಚಟುವಟಿಕೆಗಳ ಕಿರುಪರಿಚಯ. ನಂತರ ವಿಷಯದ ಮೇಲೆ ಸಂಪನ್ಮೂಲ ವ್ಯಕ್ತಿಗಳು ಮಾತನಾಡುತ್ತಾರೆ. ಪ್ರತಿಯೊಬ್ಬರ ಮಾತಿನ ನಂತರ ಪ್ರಶ್ನೋತ್ತರದ ಅವಧಿ ಇರುತ್ತದೆ. ಮುಖ್ಯ ಕಾರ್ಯಕ್ರಮ ಮಧ್ಯಾಹ್ನ ಒಂದು ಗಂಟೆಗೆ ಮುಗಿಯುತ್ತದೆ. ೧ರಿಂದ ೧-೩೦ರವರೆಗೆ ಊಟದ ಸಮಯ. ಮಹ್ಯಾಹ್ನ ೨ರ ನಂತರ ಸಂಭಾವ್ಯ ಬ್ಲಾಗೀ ಮಾತುಕತೆ ಇರುತ್ತದೆ. ಅದು ನಾಲ್ಕು ಗಂಟೆಯವರೆಗೆ ಮುಂದುವರೆಯಬಹುದು.

ವಿಚಾರಸಂಕಿರಣದ ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english

http://saadhaara.com/events/index/kannada

ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ನೀವು ಬಂದರೆ ಸಮಕ್ಷಮ ಭೇಟಿ ಆಗೋಣ.

ರವೀ...

2 comments:

hegdek said...

ಕನ್ನಡ ಸಾಹಿತ್ಯ ಡಾಟ್ ಕಾಂ ಮರಳಿ ಅಂತರ್ಜಾಲಕ್ಕೆ ಬರುತ್ತಿರುವುದು ಅತ್ಯಂತ ಸಂತೋಷದ ವಿಷಯ. ಮರು ಹುಟ್ಟಿಗೆ ಕಾರಣರಾದ ಎಲ್ಲಾರಿಗೂ ಧನ್ಯವಾದಗಳು.

ಮನೋರಮಾ.ಬಿ.ಎನ್ said...

tumba olleya prayatna...yashasu nimmadaali..haraikegalu seadaa jotegiruttave.....

ಜನಪ್ರಿಯ ಲೇಖನಗಳು