11.21.2006

kannadasaahithya.com movement for kannada computing environment

ಮಾನ್ಯ ಮುಖ್ಯ ಮಂತ್ರಿಗಳು ಹಾಗು ಮಾಹಿತಿ ತಂತ್ರಜ್ಞಾನ ಸಚಿವರು,
ಕರ್ನಾಟಕ ಸರ್ಕಾರ

ಮಾನ್ಯ ಪ್ರಾಥಮಿಕ ಶಿಕ್ಷಣ ಸಚಿವರು
ಕರ್ನಾಟಕ ಸರ್ಕಾರ

ಮಾನ್ಯ ಪ್ರೌಢ ಶಿಕ್ಷಣ ಸಚಿವರು
ಕರ್ನಾಟಕ ಸರ್ಕಾರ

ಅಧ್ಯಕ್ಷರು
ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಕರ್ನಾಟಕ ಸರ್ಕಾರ



ವಿಷಯ: ಪ್ರಾಥಮಿಕ ಹಾಗು ಪ್ರೌಢ ಶಾಲೆಗಳ ಗಣಕಗಳಲ್ಲಿ, ಸೈಬೆರ್ ಕೆಫೆಗಳಲ್ಲಿ, ಮಾರಾಟವಾಗುವ ಗಣಕಗಳಲ್ಲಿ (ಕಂಪ್ಯೂಟರ್) ಕನ್ನಡ ತಂತ್ರಾಶಗಳಾದ `ನುಡಿ' ಹಾಗು`ಬರಹ'ಗಳನ್ನು ಖಡ್ಡಾಯವಾಗಿ ಅನುಸ್ಥಾಪಿಸುವಂತೆ ಆದೇಶ ಕೋರಿ ಮನವಿ ಪತ್ರ.

ಮಾನ್ಯರೆ,

ನಮ್ಮ ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನ ವ್ಯಾಪ್ತಿಯಲ್ಲಿನ ಪರಿಣತಿ, ವಾಣಿಜ್ಯ, ಸೇವೆಯ ಕ್ಷೇತ್ರಗಳಲ್ಲಿ - ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನ ನಕಾಶೆಯಲ್ಲಿ ಹೆಗ್ಗುರುತನ್ನು ಮೂಡಿಸಿರುವ ವಿಷಯ, ನಮಗೆಲ್ಲ ಹೆಮ್ಮೆಯ ವಿಷಯ. ಇದಕ್ಕೆ ರಾಜ್ಯ ಸರ್ಕಾರದ ನೀತಿ-ನಿಯಮಾವಳಿಗಳೂ ಕಾರಣವೆನ್ನುವುದನ್ನು ನಾವೆಲ್ಲ ನಂಬಿದ್ದೇವೆ.

ಆದರೆ, ಕನ್ನಡ ಅಥವ ಸ್ಥಳೀಯ ದೇಸಗತಿಗೆ ತಕ್ಕಂತೆ ಕಂಪ್ಯೂಟರ್ ಪರಿಸರ ನಿರ್ಮಾಣವಾಗದೆ, "ಕೇವಲ ಇಂಗ್ಲಿಷ್ ಪರಿಸರ" ಮಾತ್ರ ಸೃಷ್ಟಿಯಾಗಿ ಹೋಗಿರುವ ವಾತಾವರಣ ಆತಂಕಕಾರಿಯೂ ಆಗಿದೆ ಎನ್ನುವುದರಲ್ಲಿಯೂ ಸಂಶಯವಿಲ್ಲ. ಮಕ್ಕಳನ್ನು ಕೇಳಿದರೆ: "ವರ್ಡ್, ಎಕ್ಸೆಲ್, ಪೈಂಟ್ ಇತ್ಯಾದಿ ಬರುತ್ತದೆ.." ಎಂದೆನ್ನುತ್ತಾರೆ. "ಕನ್ನಡವನ್ನು ಕಂಪ್ಯೂಟರ್‌ನಲ್ಲಿ ನೋಡೀದ್ದೀರ?" - ಎಂದು ಪ್ರಶ್ನಿಸಿದಾಗ ಪೆಚ್ಚು ಮುಖಗಳನ್ನು ಹಾಕಿಕೊಂಡು ನಿಲ್ಲುತ್ತಾರೆ.

ಕರ್ನಾಟಕ ಸರ್ಕಾರ, ಶಿಕ್ಷಣ ಕ್ಷೇತ್ರ, ಮಾಹಿತಿ ತಂತ್ರಜ್ಞಾನ ಕ್ಷೇತ್ರ ಈ ಹತಾಶ ಭಾವನೆಯನ್ನು ಮಾರ್ಪಡಿಸಬಲ್ಲದು ಎಂದು ನಂಬುತ್ತೇವೆ. ಈ ಹತಾಶ ಪರಿಸ್ಥಿತಿಯಲ್ಲಿ ಬದಲಾವಣೆಗಳನ್ನು ಜಾರಿಗೆ ತರುವ ಮೂಲಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ, ಕನ್ನಡ ಭಾಷೆ, ಸಂಸ್ಕೃತಿ ಪ್ರಗತಿಪರವಾಗುತ್ತದೆಂದು ನಾವೆಲ್ಲ ನಂಬಿದ್ದೇವೆ. ಹೀಗಾಗಿ ಕೆಳಕಂಡ ಬೇದಿಕೆಗಳುಳ್ಳ ಮನವಿಯನ್ನು ಪರಿಶೀಲಸ ಬೇಕಾಗಿ ಕೋರುತ್ತಾ, ಕನ್ನಡಸಾಹಿತ್ಯ.ಕಾಂ ಎಲ್ಲ ಬೆಂಬಲಿಗರ ಬಳಗ ಪ್ರಸ್ತಾವನೆ/ಮನವಿಯನ್ನು ಈ ರೀತಿ ನಿಮ್ಮ ಮುಂದಿಡುತ್ತಿದೆ, ಜೊತೆಗೆ ಈ ಮನವಿಗೆ ಬೆಂಬಲಿಸಿರುವವರ ಸಹಿಯುಳ್ಳ ಪತ್ರವನ್ನೂ ಲಗತ್ತಿಸಿದ್ದೇವೆ:

ಕಂಪ್ಯೂಟರ್ ಕಲಿಸುವ ಎಲ್ಲ (ಇಂಗ್ಲಿಷ್ ಮಾಧ್ಯಮವೂ ಸೇರಿದಂತೆ) ಪ್ರಾಥಮಿಕ ಹಾಗು ಪ್ರೌಢ ಶಾಲೆಗಳಲ್ಲಿರುವ ಕಂಪ್ಯೂಟರ್‌ಗಳಲ್ಲಿ ಕನ್ನಡ/ಪ್ರಾಂತೀಯ/ರಾಜ್ಯ ಭಾಷೆಗಳ ತಂತ್ರಾಂಶಗಳನ್ನು ಅನುಸ್ಥಾಪಿಸುವುದನ್ನು ಖಡ್ಡಾಯ ಮಾಡಿ ಆದೇಶಿಸಬೇಕು.
ತಿಂಗಳಿಗೆ ಒಂದು ಗಂಟೆ ಕಾಲವನ್ನು ವಿದ್ಯಾರ್ಥಿಗಳಿಗೆ - ಅನುಸ್ಥಾಪಿಸಿದ ತಂತ್ರಾಂಶದ ಸಾಧ್ಯತೆಯನ್ನು ತೋರಿಸಿಕೊಡುವಂತೆ ಪಾಠ ಮಾಡಬೇಕು.
ಇದು ಮುಂದಿನ ವರ್ಷವೇ ಜಾರಿಗೊಳಿಸುವಂತೆ ಆದೇಶವಿರಬೇಕು.
ಪಠ್ಯಕ್ರಮವನ್ನು ರಚಿಸಲು ತಜ್ಞರ ಸಮಿತಿಯೊಂದನ್ನು ಕೂಡಲೆ ರಚಿಸಬೇಕು.
ಕರ್ನಾಟಕದ ಎಲ್ಲ ಸೈಬರ್ ಕೆಫೆಗಳಲ್ಲಿ `ಬರಹ' ಹಾಗು 'ನುಡಿ' ಕನ್ನಡ ತಂತ್ರಾಂಶಗಳನ್ನು ಸ್ಥಾಪಿಸುವುದನ್ನು ಖಡ್ಡಾಯವಾಗಬೇಕು.
ಕರ್ನಾಟಕದಲ್ಲಿ ಮಾರಾಟವಾಗುವ ಯಾವುದೇ ಕಂಪ್ಯೂಟ‍ರ್‌ನಲ್ಲಾಗಲಿ ಅದು ಬಳಕೆದಾರನಿಗೆ ತಲುಪುವ ಮುನ್ನ `ಬರಹ', `ನುಡಿ' ಅಥವ ಉಚಿತವಾಗಿ ಲಭ್ಯವಿರುವ ಸ್ಥಳೀಯ ಭಾಷೆಗಳ ಯಾವುದೇ ತಂತ್ರಾಶಗಳಿದ್ದರೂ ಅವುಗಳನ್ನು ಸ್ಥಾಪಿಸಿರಬೇಕು.


- ಈ ಮೇಲಿನ ಮನವಿಗೆ ಸಕಾರಾತ್ಮಕವಾದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾ, ಜಾರಿಗೆ ತರುವಲ್ಲಿ ನಮ್ಮ ಮಿತಿಯೊಳಗಿನ ಎಲ್ಲ ಸಹಕಾರವನ್ನೂ ನೀಡುತ್ತೇವೆ ಎನ್ನುವ ಭರವಸೆಯೊಂದಿಗಿನ

ನಿಮ್ಮ ವಿಶ್ವಾಸಿಗಳು
ಚಂದ್ರಶೇಖರ್ ವಿ
(ಶೇಖರ್‌ಪೂರ್ಣ)
ಕನ್ನಡಸಾಹಿತ್ಯ.ಕಾಂ ಸಂಸ್ಥಾಪಕ-ಸಂಪಾದಕ

ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಪರವಾಗಿ,

ಎಂ ಕಿರಣ್

ರಕ್ಷಿತ್ ಎಂ ಅರ್

ಲಾವಣ್ಯ
ಮೈಸೂರು

ಕೃಪೇಶ್
ಯು ಎಸ್ ಎ


ಎಲ್ಲರಿಗೂ ನಮಸ್ಕಾರ,

ಮೇಲಿನ ಮನವಿಗೆ ಎಲ್ಲರ ಬೆಂಬಲವನ್ನು ಕೋರುತ್ತಿದ್ದೇವೆ. "ಕನ್ನಡಸಾಹಿತ್ಯ.ಕಾಂ" ಸಲ್ಲಿಸಲಿರುವ ಮನವಿಯನ್ನು ಪ್ರಿಂಟ್‌ಔಟ್ ಮಾಡಿಕೊಂಡು ನಿಮ್ಮ ಸ್ನೇಹಿತರು, ಬಂಧು ಬಳಗದವರು, ಸಹೊದ್ಯೋಗಿಗಳ ಸಹಿ ಮಾಡಿಸಿ, ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಾಗಿ ಮನವಿ. ದಿನಾಂಕ ೩೦-೧೧-೨೦೦೬ರಂದು ಈ ಮನವಿಯನ್ನು ಸಲ್ಲಿಸಲು ಉದ್ದೇಶಿಸಲಾಗಿದೆ.

ಆದುದರಿಂದ ಸಾಧ್ಯವಿದ್ದಷ್ಟು ಬೇಗ ಕಳುಹಿಸಿಕೊಡಿ. ನೀವು ಅಂಚೆ/ಕೊರಿಯರ್ ಮಾಡಿದೊಡನೆ ksctanda@gmail.comಗೆ ಮಾಹಿತಿ ನೀಡಿದರೆ ನವೆಂಬರ್ ೩೦ ದಾಟಿದರೂ ಕಾಯಬಹುದು.

ಬೆಂಗಳೂರು ಹಾಗು ಸುತ್ತಮುತ್ತಲಿನವರು ಒಂದು ದಿನ ಸಭೆ ಸೇರಿ ಸಹಿಸಂಗ್ರಹ ಸಪ್ತಾಹದಲ್ಲಿ ಸಹಿಯಾದ ಮನವಿ ಪತ್ರಗಳನ್ನೆಲ್ಲ ಸೇರಿಸಿ, ಆಯೋಗವೊಂದನ್ನು ರಚಿಸಿ, ಆಯೋಗದ ಮೂಲಕ ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.

ಮನವಿ ಸಲ್ಲಿಸಿದನಂತರ ಮಾಧ್ಯಮಗಳಿಗೆ/ಪತ್ರಿಕೆಗಳಿಗೆ ಇದರ ಸಾರಾಂಶವನ್ನು ಬಿಡುಗಡೆ ಮಾಡಲಾಗುವುದು.

ಸಹಿಮಾಡುವವರು, ದಯವಿಟ್ಟು ಸಾಧ್ಯವಾದಷ್ಟು ವಿವರಗಳನ್ನು ನೀಡಬೇಕಾಗಿ ಮನವಿ.

ಸಹಿಗಾಗಿ, ಹೆಚ್ಚುಪುಟಗಳನ್ನು ಮುದ್ರಿಸಿಕೊಂಡಿದ್ದರೆ ಒಳ್ಳೆಯದು.

ನಿಮ್ಮ ವಲಯದ ಗಣ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಹಿ ಸಾಧ್ಯವಿದ್ದರೆ ಸಂಗ್ರಹಿಸಿ.

ನೀವು ಅಂಚೆ/ಕೊರಿಯರ್ ಮೂಲಕ ಕಳುಹಿಸಬೇಕಾದ ವಿಳಾಸ:

ಶೇಖರ್‌ಪೂರ್ಣ
೧೦೩, ಮೊದಲನೆ ಬ್ಲಾಕ್,
ಜನಪ್ರಿಯ ಲೇಕ್ ವ್ಯೂ ಅಪಾರ್ಟ್‌ಮೆಂಟ್ಸ್,
ಕೋಡಿಚಿಕ್ಕನಹಳ್ಳಿ
ಬೆಂಗಳೂರು
ಕರ್ನಾಟಕ
ಇಂಡಿಯ- ೫೬೦೦೭೬
ದೂರವಾಣಿ: ೦೮೦-೨೬೪೮೪೬೧೭

ನಿಮ್ಮೆಲ್ಲರ ಬೆಂಬಲವನ್ನು ಕೋರುತ್ತಿರುವ

ಕನ್ನಡಸಾಹಿತ್ಯ,ಕಾಂ ಹಾಗು ಎಲ್ಲ ಬೆಂಬಲಿಗರ ಪರವಾಗಿ
ಶೇಖರ್‌ಪೂರ್ಣ
08-11-2006

No comments:

ಜನಪ್ರಿಯ ಲೇಖನಗಳು